ಯಲ್ಲಾಪುರ : 'ದೇವಸ್ಥಾನಗಳಿಗೆ ಎಲ್ಲ ಸಂದರ್ಭಗಳಲ್ಲಿ ಎಲ್ಲರಿಗೂ ಹೋಗಲು ಸಾಧ್ಯವಾಗದು, ಹೀಗಾಗಿ ಗರ್ಭಗುಡಿಯೊಳಗಿದ್ದ ದೇವರೇ ಭಕ್ತರ ಬಳಿಗೆ ಬರುವುದೇ ಉತ್ಸವ, ರಥೋತ್ಸವ. ಆಗ ದೇವರ ಸಾನಿಧ್ಯ ಸಮೀಪದಿಂದ ನೋಡಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಜನರಿಗೆ ಸೇವೆಯ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಗರ್ಭಗುಡಿಯ ಒಳಗೆ ಇರುವ ಮಡಿಯ ನಿಯಮಗಳು ಸಡಿಲವಾಗಿರುತ್ತವೆ. ' ಎಂದು ಸೋಂದಾ ಸ್ವರ್ಣವಲ್ಲಿ ಶ್ರಿಗಳಾದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ನಾಯ್ಕನಕೆರೆಯ ಶ್ರೀ ಶಾರದಾಂಭಾ ದೇವಸ್ಥಾನದಲ್ಲಿ ರಥಸಪ್ತಮಿ ನಿಮಿತ್ತ ಸೋಮವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.
ಪ್ರತಿಯೊಬ್ಬನಲ್ಲಿಯೂ ಪರಮಾತ್ಮನಿರುತ್ತಾನೆ. ಭಕ್ತರಿಗೆ ಮಾಡುವ ಅನ್ನದಾನದ ಮೂಲಕ ದೇವರು ಸಂಪ್ರೀತನಾಗುತ್ತಾನೆ. ಎಂದ ಅವರು ಕೋವಿಡ ನಂತಹ ಮಹಾಮಾರಿ ದೂರಾಗಬೇಕು ಎನ್ನುವ ನಿಟ್ಟಿನಲ್ಲಿ ಶ್ರೀ ಮಠದಲ್ಲಿ ಯುಗಾದಿಯಿಂದ ನವಚಂಡಿ ಹವನ ನಿರಂತರವಾಗಿ ನಡೆಸುತ್ತಾ ಬರಲಾಗಿದೆ. ಪರಿಣಾಮ ಇಂದು ಕೋವಿಡ್ ತನ್ನ ಪ್ರಾಭಲ್ಯವನ್ನು ಕಳೆದುಕೊಂಡಿದೆ. ಎಮದ ಅವರು ದೇವಸ್ಥಾನದಲ್ಲಿ ಚಂಡಿ ಪಾರಾಯಣವನ್ನು ನಿರಂತರವಾಗಿ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ವಾರ್ಷಿಕ ಮತ್ತು ಶಾಶ್ವತ ನಿಧಿ ಮೂಲಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಶ್ರೀ ಮಠದ ಎಲ್ಲ ಅಂಗ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಪುನರ್ ರಚಿಸಿದಂತೆ ಇಲ್ಲಿಯ ಶಾರದಾಂಭಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಆದ ಬದಲಾವಣೆಗೆ ಬೇರೆ ಯಾವುದೇ ಅರ್ಥವಿಲ್ಲ. ಇದು ಕಾಲಿಕ ಬದಲಾವಣೆ ಮಾತ್ರ. ದೇವರು ಮಾತ್ರ ಶಾಶ್ವತ, ಆಡಳಿತ ಆಗಾಗ ಬದಲಾವಣೆ ಆಗುತ್ತಿರಬೇಕು ಆವಾಗ ಮಾತ್ರ ಪ್ರಸ್ತುತವಾಗಿರುರುತ್ತದೆ. ಹಿಂದಿನ ಆಡಳಿತ ಮಂಡಳಿಯ ಕಾರಣದಿಂದ ದೇವಸ್ಥಾನ ಇಷ್ಟು ಬೇಗ, ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.
ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿಕುಂಬ್ರಿ, ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ಕಾರ್ಯದರ್ಶಿ ನಾಗೆಂದ್ರ ಕವಾಳೆ, ಸೀಮಾ ಅಧ್ಯಕ್ಷ ಎಸ್.ವಿ. ಹೆಗಡೆ, ಶಾರದಾಂಬಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉಮೇಶ ಭಾಗ್ವತ್,ಮಾತ್ರಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ, ಆಡಳಿತ ಮಂಡಳಿ ಸದಸ್ಯರು, ಹಾಗೂ ಮಾತ್ರ ಮಂಡಳಿ ಸದಸ್ಯೆಯರು, ಸಾರ್ವಜನಿಕರು ಇದ್ದರು.