
ಯಲ್ಲಾಪುರ : ಬಸ್ ನಿಲ್ದಾಣದಲ್ಲಿ ದಸರಾ ಆಯುಧ ಪೂಜೆಯ ದಿನವಾದ ಶುಕ್ರವಾರ ಹಲವಾರು ಬಸ್ಗಳು ಬಂದು ನಿಂತಿದ್ದವು. ಆದರೆ, ಹಿಂದಿನ ವರ್ಷಗಳಂತೆ ಹಬ್ಬದ ಸಿಂಗಾರದಲ್ಲಿ ಕಂಗೊಳಿಸುವ ಬದಲು, ಮೊಳ ಉದ್ದದ ಹಾರಗಳಿಂದ ಅಲಂಕರಿಸಲ್ಪಟ್ಟ ಬಸ್ಗಳು ಸಾಮಾನ್ಯ ದಿನಗಳ ಬಸ್ಸುಗಳಂತೆ ಕಾಣುತ್ತಿದ್ದವು.

ಕೆಎಸ್ಆರ್ಟಿಸಿ ನಿಗಮವು ದಸರಾ ಹಬ್ಬಕ್ಕೆ ಬಸ್ಸುಗಳ ಅಲಂಕಾರಕ್ಕೆ ಪ್ರತಿ ಬಸ್ಸಿಗೆ 250 ರೂಪಾಯಿಗಳನ್ನು ನಿಗದಿಪಡಿಸಿದೆ. ಆದರೆ, ದಸರಾ ಆಯುಧ ಪೂಜೆಯ ಸಮಯದಲ್ಲಿ ಹೂವು, ಹಣ್ಣು ಮತ್ತು ಇತರ ಪೂಜಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಸರಿಯಾದ ಸಂಬಳ ಪಡೆಯದ ಚಾಲಕರು ಬಸ್ಸುಗಳನ್ನು ಸ್ವತಃ ಅಲಂಕರಿಸಲು ಸಾಧ್ಯವಾಗದೆ ನೂರು ರೂಪಾಯಿಗಳಿಗೆ ಮೊಳ ಹಾರಗಳನ್ನು ಖರೀದಿಸಿ 25-30 ಅಡಿ ಉದ್ದದ ಬಸ್ಸುಗಳನ್ನು ಅಲಂಕರಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೆಸರು ಬಹಿರಂಗ ಪಡಸಲು ಇಷ್ಟಪಡದ ಚಾಲಕರೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, ಹಿಂದಿನ ವರ್ಷಗಳಲ್ಲಿ ಬಸ್ಸುಗಳನ್ನು ಸ್ವಚ್ಛಗೊಳಿಸಿ, ನಿಗಮದ ಹಣದೊಂದಿಗೆ ಸ್ವಂತ ಹಣವನ್ನೂ ಸೇರಿಸಿ ಸುಂದರವಾಗಿ ಅಲಂಕರಿಸುತ್ತಿದ್ದೆವು ಎಂದು ಹೇಳಿದರು. ಆದರೆ, ಈ ವರ್ಷ ಸಂಬಳ ಕೂಡ ಸಕಾಲಕ್ಕೆ ಬರುತ್ತಿಲ್ಲ ಮತ್ತು ನಿಗಮದಿಂದ ಸಿಂಗಾರಕ್ಕೆ ಹೆಚ್ಚುವರಿ ಹಣವೂ ನೀಡುತ್ತಿಲ್ಲ. ಹೀಗಾಗಿ, 250 ರೂಪಾಯಿಗಳಲ್ಲಿ ಬಸ್ಸುಗಳನ್ನು ಅಲಂಕರಿಸಿ ಪೂಜೆ ಮಾಡಬೇಕಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಹತ್ತು ಮೀಟರ್ ಉದ್ದದ ಬಸ್ಸಿಗೆ ಒಂದೆರಡು ಅಡಿ ಉದ್ದದ ಹಾರಗಳಿಂದ ಅಲಂಕರಿಸಿದ್ದನ್ನು ಕಂಡು ಪ್ರಯಾಣಿಕರು ಲೇವಡಿ ಮಾಡುತ್ತಿದ್ದಾರೆ. ಒಬ್ಬ ಪ್ರಯಾಣಿಕರು, ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಂದ ನಿಗಮಕ್ಕೆ ಅರ್ಥಿಕ ನಷ್ಟ ಆಗಿರಬಹುದು ಎಂದು ಅಭಿಪ್ರಾಯಪಟ್ಟು, ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ತಮ್ಮ ಊರಿನ ಬಸ್ಸುಗಳನ್ನು ಸಿಂಗರಿಸಿ ಪೂಜೆ ಮಾಡಲು ಮುಂದೆ ಬರಬೇಕೆಂದು ಸಲಹೆ ನೀಡಿದರು.
ನಾಡಿನಲ್ಲಿ ದಸರಾ ಹಬ್ಬದ ಕಳೆಗಟ್ಟಿದ್ದರೂ, ಬಸ್ಸುಗಳ ಸಿಂಗಾರದಲ್ಲಿನ ಕೊರತೆಯಿಂದ ಬಸ್ ಚಾಲಕರು ನಿರ್ವಾಹಕರಿಗೆ ಹಬ್ಬದ ಸಂಭ್ರಮ ಕುಂದಿರುವಂತೆ ಕಾಣುತ್ತಿದೆ.
100 ರೂ ದಿಂದ 250 ರೂ ಏರಿಕೆ !
ಆಯುಧಪೂಜೆ ಪ್ರಯುಕ್ತ ಕೆಎಸ್ಆರ್ಟಿಸಿ ಬಸ್ಗಳಿಗೆ ನೀಡುತ್ತಿದ್ದ ರೂ.100 ಹಣವನ್ನು 250ರೂ.ಗೆ ಹೆಚ್ಚಿಸಿದೆ.
ಒಂದು ಘಟಕದಲ್ಲಿ ಸರಿ ಸುಮಾರು 100 ರಿಂದ 500 ಬಸ್ಸುಗಳಿರುತ್ತವೆ. ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ ಅಥವಾ ಕಾರ್ಯಾಗಾರಕ್ಕೆ ನೀಡಲಾಗುತ್ತದೆ. ಆಯುಧ ಪೂಜೆಗೆ 2008ರಲ್ಲಿ ಪ್ರತಿ ಬಸ್ಸಿಗೆ, 2009ರಲ್ಲಿ 10ರೂ. ಹಾಗೂ ಪ್ರತಿ ಬಸ್ಸಿಗೆ 30ಕ್ಕೆರೂ. ಏರಿಕೆ ಮಾಡಲಾಗಿತ್ತು. 2016ರಲ್ಲಿ ಪ್ರತಿ ಬಸ್ಸಿಗೆ ರೂ.50ಕ್ಕೆ ಏರಿಕೆ, 2017ರಲ್ಲಿ ಪ್ರತಿ ಬಸ್ಸಿಗೆ ರೂ.100ಕ್ಕೆ ಏರಿಕೆ ಮಾಡಲಾಗಿತ್ತು. ರೂ.100 ಪ್ರತಿ ಬಸ್ಸಿಗೆ ನೀಡುವ ಮೊತ್ತವು 2023ರವರೆಗೂ ರೂ.100ವರೆಗೆ ಹೆಚ್ಚಿಸಲಾಗಿತ್ತು.
2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು 250ರೂ.ಗೆ ಹೆಚ್ಚಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
.