ಯಲ್ಲಾಪುರ : ಹಾಸನದ ಮಾಣಿಕ್ಯ ಪ್ರಕಾಶನ ಯಲ್ಲಾಪುರ ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಸಾಹಿತಿ ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ' ಕೃತಿಗೆ 2024 ನೇ ಸಾಲಿನ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ - ಗದ್ಯ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಾಹಿತಿ ಶಿವಲೀಲಾ ಹುಣಸಗಿ
ಹಾಸನದ ಮಾಣಿಕ್ಯ ಪ್ರಕಾಶನ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಹಿತ್ಯಕ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಅವಿರತವಾಗಿ ಕಾರ್ಯೋನ್ಮುಖವಾಗಿ ಸಾಧನೆಗೈಯುತ್ತಿರುವ ಎಲೆಮರೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯು 2023 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡದ ಗದ್ಯ ಸಂಕಲನಕ್ಕೆ ಕೊಡಮಾಡುವ 2024 ನೇ ಸಾಲಿನ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ - ಗದ್ಯ ಮಾಣಿಕ್ಯ ಪ್ರಶಸ್ತಿಗೆ ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ'ಕೃತಿ ಆಯ್ಕೆ ಮಾಡಿದ್ದಾರೆ.
ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ'ಕೃತಿ
ದತ್ತಿ ಪ್ರಶಸ್ತಿ ಹಾಗೂ ಮೂರು ಸಾವಿರ ರೂ ನಗದು ಬಹುಮಾನವನ್ನು ಹೊಂದಿದ್ದು, 2024 ನವೆಂಬರ್ 10 ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ಒಂಬತ್ತನೇ ವರ್ಷದ ರಾಜ್ಯಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ಹಾಗೂ ಹಾಸನದ ಮಾಣಿಕ್ಯ ಪ್ರಕಾಶನ ಪ್ರಕಾಶಕರಾದ ದೀಪಾ ಉಪ್ಪಾರ್ ತಿಳಿಸಿದ್ದಾರೆ.