ಯಲ್ಲಾಪುರ/ ಬೆಂಗಳೂರು : ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಪ್ರಚಾರದ ವೇಳೆ ನಾಯಕರ ಹೆಸರಿಗೆ 'ಬಾಸ್', 'ಕಿಂಗ್', 'ಟೈಗರ್' ಇತ್ಯಾದಿ ಪದಗಳನ್ನು ಬಳಸುವುದು ಹಾಗೂ ಪ್ರಾಣಿಗಳ ಚಿತ್ರಗಳೊಂದಿಗೆ ನಾಯಕರ ಫೋಟೋಗಳನ್ನು ಸೇರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಿಗೆ ಬರೆದಿರುವ ಪತ್ರದಲ್ಲಿ, ಪ್ಲೆಕ್ಸ್, ಬ್ಯಾನರ್, ಡ್ರಾಪ್ಸ್, ಕಟೌಟ್, ಹೊರ್ಡಿಂಗ್ಸ್ ಮುಂತಾದ ಪ್ರಚಾರ ಸಾಧನಗಳಲ್ಲಿ ನಾಯಕರ ಹೆಸರಿಗೆ ಅತಿರೇಕದ ಪದಗಳನ್ನು ಬಳಸಿ, ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಅವರು ಗಮನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಈ ರೀತಿಯ ಪದಪ್ರಯೋಗಗಳು ಮತ್ತು ಪ್ರದರ್ಶನಗಳು ವಿರುದ್ಧವಾಗಿವೆ ಎಂದು ಹೇಳಿರುವ ಅವರು, ಇದರಿಂದಾಗಿ ಸಾರ್ವಜನಿಕರಲ್ಲಿ ನಾಯಕರು ಮತ್ತು ಪಕ್ಷದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಲು ಅವಕಾಶ ಮಾಡಿಕೊಡುವಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಸದ್ಭಾವನೆ ಮೂಡುವ ಪದಗಳನ್ನು ಬಳಸುವಂತೆ ಡಿಕೆ ಶಿವಕುಮಾರ್ ಕೋರಿದ್ದಾರೆ. 'ನಾಯಕರು', 'ಸಾಧಕರು', 'ಹಿರಿಯರು', 'ಹಿರಿಯ ನಾಯಕರು' ಇತ್ಯಾದಿ ಪದಗಳನ್ನು ಬಳಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ. ಈ ಮೂಲಕ ಪಕ್ಷ ಹಾಗೂ ನಾಯಕರ ಘನತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದ್ದಾರೆ.