ಯಲ್ಲಾಪುರ: "ಪ್ರಜಾಪ್ರಭುತ್ವದ ಅಡಿಗಲ್ಲು ಅಲುಗಾಡುತ್ತಿರುವುದರ ನಡುವೆ ಪ್ರಜಾಪ್ರಭುತ್ವದ ಮಹತ್ವವನ್ನು ನಾವೆಲ್ಲರೂ ಅರ್ಥೈಸಿಕೊಂಡು, ಅದನ್ನು ರಕ್ಷಿಸಲು ಜಾಗೃತರಾಗಬೇಕು" ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ತಾಟವಾಳದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಇಂದಿನ ಯುವ ಜನಾಂಗ ಹಾಗೂ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ವಿವರಿಸುವ ನಿಟ್ಟಿನಲ್ಲಿ ಈ ದಿನಾಚರಣೆ ಕನ್ನಡಿಗರಿಗೆ ಮಹತ್ವದ ದಿನವಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮುಖ್ಯ ಅಂಶಗಳು ಕುಸಿಯುತ್ತಿವೆ ಎಂಬ ವಾದಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ, ಪ್ರಜಾಪ್ರಭುತ್ವದ ಆಶಯಗಳ ರಕ್ಷಣೆ, ಆದರ್ಶಗಳ ಪಾಲನೆ, ಹಾಗೂ ಸದ್ಯದ ವಾಸ್ತವಿಕತೆಗಳನ್ನು ಸೂಕ್ಷ್ಮವಾಗಿ ನೋಡಬೇಕಾಗಿದೆ. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುತವರ್ಜಿ ವಹಿಸಿ, ರಾಜ್ಯಾದ್ಯಂತ ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಬೃಹತ್ ಮಾನವ ಸರಪಳಿಯ ನಿರ್ಮಾಣಕ್ಕೆ ಕರೆ ನೀಡಿದ್ದಾರೆ ಎಂದು ಹೆಬ್ಬಾರ್ ಹೇಳಿದರು.
ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, "ಬ್ರಿಟಿಷರು ಭಾರತೀಯರನ್ನು ಅನಕ್ಷರಸ್ತರು ಎಂದು ನಿರೂಪಿಸಿದರೂ, ಪ್ರಜಾಪ್ರಭುತ್ವದ ಸ್ವೀಕಾರದಿಂದ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಮೂರನೇ ಅಭಿವೃದ್ಧಿ ಪರವಾದ ದೇಶವಾಗಿ ಗುರುತಿಸಿಕೊಂಡಿದೆ. ಧರ್ಮ, ಜಾತಿ, ಭಾಷೆ, ನೀರಿಗಾಗಿ ನಡೆಯುವ ಆಂತರಿಕ ಜಗಳವನ್ನು ಮುಕ್ತಗೊಳಿಸಿದಾಗ, ದೇಶ ಇನ್ನಷ್ಟು ಪ್ರಗತಿ ಸಾಧಿಸಲಿದೆ" ಎಂದು ಹೇಳಿದರು.
ಯಲ್ಲಾಪುರ ತಹಶೀಲ್ದಾರ ಯಲ್ಲಪ್ಪ ಗೊನೆಣ್ಣನವರ, "ಬೀದರದಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಾಣ ಮಾಡುವ ಯೋಜನೆಗೆ ಸರ್ಕಾರದ ನಿರ್ದೇಶನದಂತೆ ಯಲ್ಲಾಪುರ ತಾಲ್ಲೂಕು ಸಂಪೂರ್ಣ ಸಜ್ಜಾಗಿದೆ. ಕಾಡು ಪ್ರದೇಶವನ್ನು ಹೊರತುಪಡಿಸಿ, ಜನ ವಸತಿ ಪ್ರದೇಶದಲ್ಲಿ ಈ ಮಾನವ ಸರಪಳಿಯನ್ನು ರೂಪಿಸಲಾಗಿದೆ" ಎಂದು ಹೇಳಿದರು. ತಾಟವಾಳದಿಂದ ತಡುಗುಣಿಯವರೆಗೆ ಸರಪಳಿಯನ್ನು ನಿರ್ಮಿಸಲು ಸ್ಥಳೀಯರು ಮತ್ತು ಶಾಲಾ ಮಕ್ಕಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡರು.
ಮುಂಡಗೋಡ ತಹಶೀಲ್ದಾರ ಶಂಕರ ಗೌಡ ಅವರು, "ಭಾರತವು ಶ್ರೇಷ್ಠ ಸಂವಿಧಾನವನ್ನು ಹೊಂದಿದೆ, ಅದರ ಆಶಯಗಳಿಗೆ ನಾವು ಗೌರವ ನೀಡಬೇಕು" ಎಂದು ನುಡಿದರು.
ಈ ಸಂದರ್ಭದಲ್ಲಿ, ಯಲ್ಲಾಪುರ ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಮಾಜಿ ತಾ.ಪಂ ಅಧ್ಯಕ್ಷ ಲಾರೇನ್ಸ್ ಸಿದ್ದಿ, ಪೊಲೀಸ್ ಇನ್ಸಪೆಕ್ಟರ್ ರಮೇಶ್ ಹಾನಾಪುರ, ಹಾಗೂ ವಿವಿಧ ಇಲಾಖೆಗಳ ತಹಶೀಲ್ದಾರರು, ಸ್ಥಳೀಯ ಜನಪ್ರತಿನಿಧಿಗಳು, ಶಾಲಾ-ಕಾಲೇಜು ಮುಖ್ಯಸ್ಥರು, ಎನ್.ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಸಮಾಜ ಕಲ್ಯಾಣ ತಾಲೂಕಾಧಿಕಾರಿ ಜ್ಯೋತಿ ನರೋಟಿ ಸಂವಿಧಾನ ಪ್ರಸ್ತಾವನೆಯ ವಿವರಣೆ ನೀಡಿ, ಪ್ರತಿಜ್ಞಾ ವಿಧಿ ಭೋದಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.
ಯಲ್ಲಾಪುರ ಪಟ್ಟಣದಲ್ಲಿ ಬೀಸ್ಗೋಡ್ ಕ್ರಾಸ್ ನಿಂದ ಶಿರಸಿ ರಸ್ತೆಯ ಎಪಿಎಂಸಿ ಕೊನೆಯವರೆಗೆ ಬೃಹತ್ ಮಾನವ ಸರಪಳಿಯ ನಿರ್ಮಾಣ ನಡೆಯಿತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದರು.
.
.
.