ಯಲ್ಲಾಪುರ : ಯಲ್ಲಾಪುರ-ಮುಂಡಗೋಡ ರಸ್ತೆಯ ಲಿಂಗನಕೊಪ್ಪ ಶಾಲೆಯ ಸಮೀಪ ಮುಂಡಗೋಡ ಕಡೆಗೆ ತೋರಿಸುವ ಸರಿಯಾದ ಸೂಚನಾ ಫಲಕದ ಇಲ್ಲದೇ ವಾಹನ ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹೊಸದಾಗಿ ನಿರ್ಮಿತಗೊಂಡಿರುವ ಮಾವಳ್ಳಿ ರಸ್ತೆ ಪ್ರವಾಸಿಗರಿಗೆ ಹಾಗೂ ವಾಹನ ಸವಾರರಿಗೆ ಗೊಂದಲ ಉಂಟುಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಿಂಗನಕೊಪ್ಪ ಶಾಲೆಯ ಮುಂಭಾಗ ಹಾಗೂ ಪಕ್ಕದಿಂದ ಮಾವಳ್ಳಿಗೆ ಹೊಸ ರಸ್ತೆಯನ್ನು ವಾಹನ ಸವಾರರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಆದರೆ, ಇದರಲ್ಲಿ ಪ್ರಮುಖವಾಗಿ ಮುಂಡಗೋಡ ಹಾಗೂ ಮಾವಳ್ಳಿ ಕಡೆಗೆ ತೋರಿಸುವ ಸಮರ್ಪಕ ಸೂಚನಾ ಫಲಕಗಳ ಅಭಾವವು ವಾಹನ ಸವಾರರನ್ನು ಗೊಂದಲಕ್ಕೆ ದೂಡುತ್ತಿದೆ. ಬರುವ ವಾಹನಗಳು ಮುಂಡಗೋಡ ಕಡೆಗೆ ಹೋಗುವ ಬದಲು ಮಾವಳ್ಳಿ ಕಡೆ ಹೋಗಿ, ಹುಬ್ಬಳ್ಳಿ ಮಾರ್ಗವನ್ನು ತಲಪುತ್ತಿವೆ. ಇದರಿಂದಾಗಿ, ಹೊರ ಜಿಲ್ಲೆಯವರು ಹಾಗೂ ಅಂತರ ಜಿಲ್ಲೆಗಳಿಗೆ ತೆರಳುವ ವಾಹನ ಸವಾರರು ತಮ್ಮ ಉದ್ದೇಶಿತ ಸ್ಥಳ ತಲುಪದೆ, ಹೆದ್ದಾರಿ ಮಾರ್ಗದಲ್ಲಿ ಪರದಾಡುವ ಸ್ಥಿತಿಗೆ ತಲುಪಿದ್ದಾರೆ.
ಇಲ್ಲಿಯ ಯುವಕ ಸಂಘದ ಸದಸ್ಯರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಮುಂಡಗೋಡ ಹಾಗೂ ಮಾವಳ್ಳಿ ಕಡೆಗೆ ಹೋಗುವ ವಾಹನಗಳಿಗೆ ನಿಖರ ಮಾರ್ಗದರ್ಶನ ಮಾಡುವ ಸಲುವಾಗಿ ಫಲಕ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೂ, ಯಾವುದೇ ಸಮರ್ಪಕ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ, ಸಹಸ್ರಳ್ಳಿ ಗಜಾನನೋತ್ಸವ ಸಮಿತಿಯ ಸದಸ್ಯರಾದ ಪ್ರವೀಣ್ ಪಾಟೀಲ್ ,ಗಣೇಶ್ ದೇಶಭಂಡಾರಿ ,ನವೀನ ಅಂಕೋಲೆಕರ್, ಪರಮೇಶ್ವರ್ ವರ್ಪೆ ,ಕೃಷ್ಣ ಮೊಗೇರ್ ಪವಿತ್ರಾ ಪಾಟೀಲ್ ,ವಿಶಾಲ್ ಅಂಕೋಲೆಕರ್ ತಮ್ಮ ಕೈಲಾದ ತಾತ್ಕಾಲಿಕ ಫಲಕವನ್ನು ಸೋಮವಾರ ಅಳವಡಿಸಿದರು.
ಹುಬ್ಬಳ್ಳಿ-ಕಲಘಟಗಿ ಮಾರ್ಗದಲ್ಲಿಯೂ ಸಹ ಮಾರ್ಗ ಸೂಚನಾ ಫಲಕಗಳ ಕೊರತೆಯು ವಾಹನ ಸವಾರರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಈ ತಿರುವುಗಳಿಗೆ ಮಾರ್ಗ ಸೂಚನೆ ಬೋರ್ಡ್ಗಳನ್ನು ಅಳವಡಿಸದ ಕಾರಣ, ಕೆಲವು ಸವಾರರು ಮೊದಲ ಬಾರಿಗೆ ಈ ರಸ್ತೆಯನ್ನು ಬಳಸುವಾಗ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ, ಕೆಲವು ವಾಹನ ಸವಾರರು ಗುರಿಯನ್ನು ತಪ್ಪಿಸಿ, ಬೇರೆ ಹಳ್ಳಿಗಳತ್ತ ತಲುಪುತ್ತಿದ್ದಾರೆ.
ಇಲಾಖೆಯ ನಿರ್ಲಕ್ಷ್ಯತೆ ಅಸಮಾದಾನ ವ್ಯಕ್ತಪಡಿಸಿರುವ ಸ್ಥಳೀಯರು, ಸಂಬಂಧಿಸಿದ ಇಲಾಖೆಗಳು ಎಮ್ಮೆ ಖರೀದಿಸಿದ ಮೇಲೆ, ಎಮ್ಮೆ ಕಟ್ಟಲು ಹಗ್ಗ ಖರೀದಿಸಲು ಕಂಜೂಸುತನ ತೋರಿಸುವಂತೆ ಕಂಡುಬರುತ್ತಿದೆ ಎಂದು ಸ್ಥಳೀಯರು ತೀಕ್ಷ್ಣವಾಗಿ ಟೀಕಿಸಿದ್ದಾರೆ.
.
.