ಯಲ್ಲಾಪುರ: ಪರಿಸರ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, "ಮನುಷ್ಯನ ಜೀವಿತಾವಧಿಯಲ್ಲಿ ಏನಾದರೂ ಉತ್ತಮ ಕೊಡುಗೆ ನೀಡಬೇಕೆಂದಾದರೆ ಅದು ಪರಿಸರ ಸಂರಕ್ಷಣೆಯ ಮೂಲಕವೇ ಸಾಧ್ಯ" ಎಂದು ಇಡಗುಂದಿ ವಲಯದ ಅರಣ್ಯಾಧಿಕಾರಿ ಶಿಲ್ಪಾ ಎಸ್ ನಾಯ್ಕ ಅಭಿಪ್ರಾಯಪಟ್ಟರು.
ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು. ಮಕ್ಕಳಿಗೆ ಪರಿಸರವು ಕುತೂಹಲ ಮತ್ತು ಆಶ್ಚರ್ಯಗಳಿಂದ ತುಂಬಿದ ಜಗತ್ತಾಗಿದೆ,
ವಿಜ್ಞಾನದ ಅದ್ಭುತಗಳನ್ನು ನಿರಂತರವಾಗಿ ಬಿಚ್ಚಿಡುವ ಪರಿಸರವು ಸಮೃದ್ಧವಾಗಿದ್ದರೆ ಮಾತ್ರ ನಾವು ನಿಜವಾಗಿಯೂ ಸುಖಕರ ಜೀವನ ನಡೆಸಬಹುದು. ಮಕ್ಕಳಿಗೆ ಜೀವ ಜಗತ್ತಿನ ಅದ್ಭುತಗಳನ್ನು ಹಂತಹಂತವಾಗಿ ಪರಿಚಯಿಸುವುದು ಅಗತ್ಯ ಎಂದರು. ಪರಿಸರ ಪ್ರೀತಿಯ ಬೀಜವು ಎಳೆಯ ಮನಸ್ಸುಗಳಲ್ಲಿ ಬೇರೂರಿದ್ದರೆ, ಅದು ಅವರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಇಡುಗುಂದಿ ವಲಯವು ವನಮಹೋತ್ಸವ ಮತ್ತು ವನ್ಯಜೀವಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು.
ಎಸ್ ಡಿ ಎಂ ಸಿ ಅಧ್ಯಕ್ಷ ಕಾಮೇಶ್ವರ ಭಟ್ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದರು, ವಜ್ರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಪಿಡಿಒ ಸಂತೋಷಿ ಬಂಟ್, ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ ನಾಯ್ಕ, ಮುಖ್ಯಾಧ್ಯಾಪಕಿ ರಾಧಾ ಭಟ್, ಗಸ್ತು ವನಪಾಲಕರು ಕೆಂಚಪ್ಪ ಹಂಚಿನಾಳ್, ಗೌಡಪ್ಪ ಗೌಡ ಸುಳ್ಳದ್ ಮತ್ತು ದತ್ತಾತ್ರೇಯ ತಳವಾರ ಮುಂತಾದವರು ಇದ್ದರು.