ಯಲ್ಲಾಪುರ ; ಸೋಮವಾರ ರಾತ್ರಿ "ಯಲ್ಲಾಪುರ ನ್ಯೂಸ್ "ನಲ್ಲಿ ಯಲ್ಲಾಪುರದ ಬೆಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಕೆಲಸಗಾರರಿಗೆ ಸಂಬಳ ನೀಡದೆ ಇರುವ ಕಾರಣಕ್ಕೆ ಬಂದ್ ಮಾಡಲಾಗಿದೆ ಎಂದು ವರದಿ ಮಾಡಲಾಗಿತ್ತು, ವರದಿಗೆ ಸ್ಪಂದಿಸಿದ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳು ಹಾಗೂ ರಾಜಕೀಯ ಪ್ರಮುಖರು ನೀಡಿದ ಭರವಸೆ ಕಾರಣಕ್ಕಾಗಿ ಕೆಲಸಗಾರರು ಹಾಗೂ ಗುತ್ತಿಗೆದಾರರಿಗೆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಕೂಡಲೇ ಇಂದಿರಾ ಕ್ಯಾಂಟೀನ್ ಅನ್ನು ತೆರೆಯುವಂತೆ ವ್ಯವಸ್ಥೆ ಮಾಡಿದ್ದಾರೆ.
ಕಳೆದ 10 ತಿಂಗಳಿಂದ ಇಲ್ಲಿಯ ಕೆಲಸಗಾರರಾದ ನರೇಂದ್ರ ನಾಯ್ಕ, ಸುಮಂಗಲಾ ಕುರಬರ್, ಮಂಜುಳಾ , ಮಹಾತ್ಮಾ, ಗೀತಾ ಇವರಿಗೆ ಗುತ್ತಿಗೆ ಪಡೆದ ಸಂಸ್ಥೆಯವರು ಸಂಬಳ ನೀಡಿರಲಿಲ್ಲ. ಅಲ್ಲದೆ ಕಿರಾಣಿ ಅಂಗಡಿಯಲ್ಲಿ, ತರಕಾರಿ ಅಂಗಡಿಯಲ್ಲಿ ಗ್ಯಾಸ್ ವಿತರಕರಲ್ಲಿ ಹಣದ ಬಾಕಿಯನ್ನು ಇಟ್ಟುಕೊಂಡಿದ್ದರು. ಅವರು ಸಾಮಾಗ್ರಿಗಳನ್ನು ನಕೊಡುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಗುತ್ತಿಗೆ ಪಡೆದ ಸಂಸ್ಥೆಗೆ ಬರಬೇಕಾದ ಹಣದ ಮೊತ್ತ ಇದುವರೆಗೂ ಬಂದಿಲ್ಲ ಎನ್ನುವ ಕಾರಣಕ್ಕೆ ಸಂಸ್ಥೆಯವರು ಕೆಲಸಗಾರರಿಗೆ ಸಂಬಳ ನೀಡದೆ ಅವರಿಂದಲೇ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು.
ಬಹಳಷ್ಟು ಶ್ರಮಪಟ್ಟು ನಿರ್ವಹಣೆ ಮಾಡಿದ್ದ ಕೆಲಸಗಾರರು ಇದೀಗ ಆರ್ಥಿಕ ಸಂಕಷ್ಟದಿಂದಾಗಿ ಸೋಮವಾರ ಬೆಳಿಗ್ಗೆ ಇಂದಿರಾ ಕ್ಯಾಂಟೀನ್ ಕಂಪೌಂಡ್ ಹಾಗೂ ಇಂದಿರಾ ಕ್ಯಾಂಟೀನ್ ಗೆ ಚಾವಿ ಹಾಕಿ ಬಂದ್ ಮಾಡಿದ್ದರು. ಪ್ರತಿ ದಿನ ಬೆಳಿಗ್ಗೆ ನಾಲ್ವತ್ತು ಉಪಹಾರ ಹಾಗೂ ಚಹಾ ಹಗಲಿನಲ್ಲಿ ಮುವತೈದರಿಂದ ನಾಲ್ವತ್ತು ಊಟ, ರಾತ್ರಿ ಐದರಿಂದ ಹತ್ತರವರೆಗೆ ಊಟಕ್ಕೆ ಶ್ರಮಿಕರು ಬರುತ್ತಿದ್ದರು. ಬಹಳಷ್ಟು ಶ್ರಮಜೀವಿಗಳಿಗೆ ಇಂದಿರಾ ಕ್ಯಾಂಟೀನ್ ಆಶ್ರಯವಾಗಿತ್ತು.